ಸಚಿವೆ ಮಾಡುವುದು ಹೈಕಮಾಂಡ್ ನಿರ್ಧಾರ: ಲಕ್ಷ್ಮಿ ಹೆಬ್ಬಾಳಕರ

ಬೆಂಗಳೂರು: ‘ನನಗೆ ಸಚಿವ ಸ್ಥಾನ ಕೊಟ್ಟರೂ ಸಂತೋಷ, ಇಲ್ಲವಾದರೆ ಬೇಸರವಿಲ್ಲ. ಮಂತ್ರಿ ಮಾಡುವುದು ಬಿಡುವುದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸಚಿವೆ ಜಯಮಾಲ ಅವರ ಬಗ್ಗೆ ನನಗೆ ಹೊಟ್ಟೆ ಕಿಚ್ಚಿಲ್ಲ. ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ಅದರಲ್ಲಿ ಹೊಸದೇನಿದೆ’ ಎಂದು ಪ್ರಶ್ನಿಸಿದರು.
ಸೇವೆ ಪದ ಬಳಕೆಯ ಬಗ್ಗೆ ಪುನಃ ಸಮಜಾಯಿಷಿ ನೀಡಿದ ಅವರು, ‘ನಮ್ಮ ಕಡೆ ಮಾತನಾಡುವ ಸೇವೆಯ ಬಗ್ಗೆ ಹೇಳಿದ್ದೆ. ಅವರು ಯಾವ ಸೇವೆ ಅಂದುಕೊಂಡರೊ ಗೊತ್ತಿಲ್ಲ. ಸೇವೆಯಲ್ಲಿ ಉರುಳು ಸೇವೆ, ದೇವರ ಸೇವೆ, ಅಭಿಷೇಕ ಸೇವೆ ಎಲ್ಲವೂ ಇದೆ. ನಮ್ಮ ಅರ್ಥದಲ್ಲಿ ಆ ರೀತಿ ಸೇವೆಯೇ ಹೊರತು ಬೇರೆಯದಲ್ಲ’ ಎಂದು ಹೆಬ್ಬಾಳಕರ ತಿಳಿಸಿದರು.