24ರಿಂದ ರಾಹುಲ್ 2ನೇ ಹಂತದ ಪ್ರಚಾರ
ಪ್ರಜಾವಾಣಿ ವಾರ್ತೆ, February 22, 2018

ನವದೆಹಲಿ (ಪಿಟಿಐ): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ತಿಂಗಳ 24ರಿಂದ ಮೂರು ದಿನಗಳ ಕಾಲ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವರು.
ಎರಡನೇ ಹಂತದ ಪ್ರಚಾರ ಕಾರ್ಯ ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡದಲ್ಲಿ ನಡೆಯಲಿದೆ.
‘ರಾಹುಲ್ ಅವರು ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ತೆರಳಲಿದ್ದಾರೆ’ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಹಂಗಾಮಿ ಕಾರ್ಯದರ್ಶಿ ಮಣಿಕಂ ಟ್ಯಾಗೋರ್ ಹೇಳಿದ್ದಾರೆ.
‘ಸಾರ್ವಜನಿಕ ಸಭೆ, ಮಹಿಳೆಯರ ರ್ಯಾಲಿ, ವಿವಿಧ ಸಂಘಗಳ ಜೊತೆ ಸಂವಾದ ಕಾರ್ಯಕ್ರಮಗಳಲ್ಲೂ ಅವರು ಪಾಲ್ಗೊಳ್ಳುವರು. ಈ ಬಾರಿಯೂ ರಾಹುಲ್ ಅವರು ದೇವಾಲಯ ಹಾಗೂ ದರ್ಗಾಗಳಿಗೆ ಭೇಟಿ ನೀಡುವರು’ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.