ಜನಸಂಘ ಮತ್ತು ಭಾರತೀಯ ಜನತಾ ಪಕ್ಷ

ಕರ್ನಾಟಕದಲ್ಲಿ ಭಾರತೀಯ ಜನಸಂಘ ಮತ್ತು ಆನಂತರ ಭಾರತೀಯ ಜನತಾ ಪಾರ್ಟಿಯ ಬೆಳವಣಿಗೆ ಒಂದೇ ಸಮನಾಗಿಲ್ಲ. ಅದು ಹಲವಾರು ಎಡರು ತೊಡರುಗಳನ್ನು ಎದುರಿಸುತ್ತಾ ಬಂದಿದೆ. ಕಾಂಗ್ರೆಸ್ಸಿನಂಥ ಪಕ್ಷ ಅಲ್ಲ; ಶಿಸ್ತು, ಸ್ವಾರ್ಥತ್ಯಾಗ, ಸೇವಾ ಮನೋಧರ್ಮ, ಅಖಂಡ ರಾಷ್ಟ್ರಾಭಿಮಾನ– ಇವು ತಮ್ಮ ವೈಶಿಷ್ಟ್ಯ ಎಂದು ಪಕ್ಷದವರು ಹೊಗಳಿಕೊಳ್ಳುತ್ತಾರೆ. ಆದರೆ, ಇತರ ಪಕ್ಷಗಳಲ್ಲಿರುವಂತೆಯೇ ಇಲ್ಲೂ ಅಧಿಕಾರಕ್ಕಾಗಿ ಬಡಿದಾಟ, ನಾನಾ ಬಗೆಯ ಹೊಂಚುಗಾರಿಕೆ, ಭ್ರಷ್ಟಾಚಾರ, ಒಳಜಗಳಗಳು, ಪಕ್ಷಾಂತರ ಮುಂತಾದ ಪಿಡುಗುಗಳಿವೆ. ಕೆಲವು ವೇಳೆ ರಾಷ್ಟ್ರ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ನಾಯಕತ್ವಗಳ ನಡುವೆ ತಿಕ್ಕಾಟ, ಪರಸ್ಪರ ಅಸೂಯೆ ಬೆಳೆದಿರುವುದನ್ನು ಕಾಣಬಹುದು. ಅಖಿಲ ಭಾರತ ಮಟ್ಟದಲ್ಲಿ ಸಂಘೀಯರು ಮತ್ತು ನೇರವಾಗಿ ರಾಜಕೀಯ ಪಕ್ಷಕ್ಕೆ ಬಂದವರು– ಇವರ ನಡುವೆ ಪರಸ್ಪರ ಅಪನಂಬಿಕೆ ಹಾಗೂ ಮೇಲುಗೈ ಪಡೆಯುವ ಪ್ರಯತ್ನ ನಡೆದಿರುವಂತೆ ಇಲ್ಲಿಯೂ ಅಂಥ ಬೆಳವಣಿಗೆಗಳಾಗಿವೆ. ಅಧಿಕಾರದಿಂದ ಒಬ್ಬರನ್ನು ಕಿತ್ತು ಇನ್ನೊಬ್ಬರನ್ನು ತಂದು, ಪರಸ್ಪರ ದೋಷಾರೋಪ ಮಾಡುವುದು– ಇವೆಲ್ಲ ಸಾಮಾನ್ಯ. ಎಲ್ಲ ರಾಜಕೀಯ ಪಕ್ಷಗಳ ಮೂಲ ಸಾಮಗ್ರಿ ಎಂದರೆ ಸದಸ್ಯ ಬಲ ಒಂದೇ. ಆದ್ದರಿಂದ ಈ ಎಲ್ಲ ವ್ಯಾಧಿಗಳು ಎಲ್ಲ ಪಕ್ಷಗಳಿಗೂ ಸಾಮಾನ್ಯ; ಬಿಜೆಪಿಯೇನೂ ಪ್ರತ್ಯೇಕವಲ್ಲ ಎಂಬ ಭಾವನೆಯೂ ಸಾರ್ವಜನಿಕರಲ್ಲಿ ಬೆಳೆದಿದೆ. ಹಲವರಿಗೆ ಭ್ರಮನಿರಸನವಾಗಿದೆ. ಪಕ್ಷದ ಒಳಗೂ ಇಂಥ ನಿರಸನ ಪ್ರವೃತ್ತಿ, ನಿರಾಸೆ ಬೆಳೆದಿದ್ದರೆ ಆಶ್ಚರ್ಯವಿಲ್ಲ. ಹಾಗಾಗದಿದ್ದರೆ ಅದೊಂದು ಪವಾಡವೇ ಎನಿಸುತ್ತಿತ್ತು!
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ, ಅದಕ್ಕೂ ಹಿಂದೆ ಭಾರತೀಯ ಜನಸಂಘದ ಪ್ರಭಾವ ಬೆಳೆಯಲು ಆದ್ಯ ಸ್ಫೂರ್ತಿ ಬಂದದ್ದು ಡಾ. ಶ್ಯಾಮಪ್ರಸಾದ ಮುಖರ್ಜಿಯವರಿಂದ. ಜಗನ್ನಾಥರಾವ್ ಜೋಷಿ ಅವರ ಉಜ್ವಲ ಭಾಷಣಗಳು ಹಲವರ ಮನಸ್ಸುಗಳನ್ನು ಸೆಳೆದವು. ಹಾಸ್ಯ, ವ್ಯಂಗ್ಯ, ಆದರ್ಶ, ಸ್ಫೂರ್ತಿ ಇವು ಅವರ ಭಾಷಣದ ಲಕ್ಷಣಗಳು. ಆನಂತರ ಭಾವುರಾವ್ ದೇಶಪಾಂಡೆ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕದಲ್ಲಿ ಪಕ್ಷವನ್ನು ಬೆಳೆಸಲು ಹೆಣಗಿದರು. ಎ.ಕೆ. ಸುಬ್ಬಯ್ಯ ಅವರೂ ಶಿವಮೊಗ್ಗದ ಡಾ. ಕೆ.ಎಸ್. ದತ್ತಾತ್ರಿಯವರೂ ಪಕ್ಷದ ಜನಪ್ರಿಯತೆಗೆ ಪ್ರಯತ್ನಿಸಿದರು. ವರದರಾಜ ಶೆಟ್ಟಿ, ಮಲ್ಲಿಕಾರ್ಜುನ ರಾಜ, ಕರಂಬಳ್ಳಿ ಸಂಜೀವ ಶೆಟ್ಟಿ, ಡಾ. ವಿ.ಎಸ್. ಆಚಾರ್ಯ, ಡಿ.ಎಚ್. ಶಂಕರಮೂರ್ತಿ ಇವರ ಪಾತ್ರವೂ ಕಡಿಮೆಯೇನಲ್ಲ. 1980ರಲ್ಲಿ ಭಾರತೀಯ ಜನತಾ ಪಾರ್ಟಿ ಹುಟ್ಟಿಕೊಂಡಿತು. ಇದು ಹಿಂದೆ ಹೇಳಿದ ಹಾಗೆ, ಭಾರತೀಯ ಜನಸಂಘದ ಮರುಹುಟ್ಟು. ಕರ್ನಾಟಕದಲ್ಲಿ ಇದರ ಅವತಾರ ಆದದ್ದು ಲಾಲ್ಬಾಗಿನ ರಜತ ಮಹೋತ್ಸವ ಭವನದಲ್ಲಿ. ಅಲ್ಲಿ ಸೇರಿದ್ದ ಸಭೆಯಲ್ಲಿ ಎ.ಕೆ. ಸುಬ್ಬಯ್ಯನವರು ರಾಜ್ಯದ ಶಾಖೆಯ ಅಧ್ಯಕ್ಷರಾದರು. ಹಲವು ತರುಣರು ಇದರಿಂದ ಆಕರ್ಷಿತರಾದರು. ಪಕ್ಷದ ಬೆನ್ನೆಲುಬಾದ ಆರೆಸ್ಸೆಸ್ ರಾಜ್ಯದಲ್ಲಿ ಹಲವು ವರ್ಷಗಳಿಂದ ಬೆಳೆಯುತ್ತಾ ಬಂದಿತ್ತು. ಇವರೆಲ್ಲ ಉತ್ಸಾಹದಿಂದ, ಶ್ರದ್ಧೆಯಿಂದ, ನಿಷ್ಠೆಯಿಂದ ಭಾಜಪ ತೇರನ್ನೆಳೆಯಲು ಸಜ್ಜಾಗಿ ನಿಂತರು.
1983ರಲ್ಲಿ ರಾಜ್ಯದಲ್ಲಿ ಚುನಾವಣೆ ಬಂತು. ಕಾಂಗ್ರೆಸ್ ವಿರೋಧಿ ಬಲಗಳನ್ನೆಲ್ಲ ಒಂದುಗೂಡಿಸಲು ನಡೆಸಿದ ಪ್ರಯತ್ನ ಫಲಿಸಲಿಲ್ಲ. ಭಾಜಪ ಯಾವ ಹೊಂದಾಣಿಕೆಗೂ ಒಪ್ಪಲಿಲ್ಲ. ಇತರ ಪಕ್ಷಗಳ, ಮುಖ್ಯವಾಗಿ ಜನತಾ ಪಕ್ಷದ ಕುತಂತ್ರದಿಂದ, ಸ್ವಾರ್ಥದಿಂದ ಮಾತುಕತೆ ಮುರಿದುಬಿತ್ತು ಎಂಬುದು ಭಾಜಪದವರ ಆರೋಪ. ಚುನಾವಣೆ ಎರಡೂ ಪಕ್ಷಗಳಿಗೆ ಪಾಠ ಕಲಿಸಿತ್ತು. ತಾನು ಬಹುಮತ ಪಡೆದು ಸ್ವತಂತ್ರವಾಗಿ ಸರ್ಕಾರ ರಚಿಸಬಹುದೆಂಬ ಕನಸು ಕಂಡಿದ್ದ ಜನತಾ ಪಕ್ಷಕ್ಕೆ 61 ಸ್ಥಾನಗಳು ಬಂದಿದ್ದವು. ಭಾಜಪ ಗಳಿಸಿದ ಸ್ಥಾನಗಳು 18. ಭಾಜಪದ ಬೆಂಬಲದಿಂದ ಸರ್ಕಾರ ರಚಿಸಲು ರಾಮಕೃಷ್ಣ ಹೆಗಡೆ ನಡೆಸಿದ ಪ್ರಯತ್ನ ಫಲಿಸಲಿಲ್ಲ. ರಾಜ್ಯದ ಬಿಜೆಪಿ ನಾಯಕರು ಇದಕ್ಕೆ ವಿರುದ್ಧವಾಗಿದ್ದರು. ಹೆಗಡೆಯವರು ರಾಷ್ಟ್ರ ಮಟ್ಟದ ಭಾಜಪ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಅವರ ಒಪ್ಪಿಗೆ ಪಡೆದರು. ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಮತದಾರರು ತಿರಸ್ಕರಿಸಿದ್ದಾರೆ, ಕಾಂಗ್ರೆಸ್ ವಿರೋಧಿ ಸರ್ಕಾರ ಬರಬೇಕೆಂಬುದು ಜನತೆಯ ಇಚ್ಛೆ, ಆದ್ದರಿಂದ ಜನರ ಆಶಯವನ್ನು ಮನ್ನಿಸಿ ಅವರ ಹಿತಕ್ಕಾಗಿ ಭಾಜಪವೂ ಜನತಾ ಪಕ್ಷವೂ ಒಂದಾಗಿ ಸರ್ಕಾರ ರಚಿಸಬೇಕೆಂಬುದು ವಾಜಪೇಯಿಯವರ ನಿಲುವಾಗಿತ್ತು. ಭಾಜಪದ ಬೆಂಬಲದಿಂದ ಜನತಾ ಪಕ್ಷದ ಸರ್ಕಾರ ರಚನೆಯಾಯಿತು. ಆದರೂ, ರಾಮಕೃಷ್ಣ ಹೆಗಡೆಯವರು ಭಾಜಪವನ್ನು ಕಡೆಗಣಿಸಿ ತಮ್ಮ ಪ್ರಭಾವವನ್ನು ಬೆಳೆಸಿಕೊಂಡರೆಂಬುದು ಆ ಪಕ್ಷದ ಆರೋಪ. ರಾಜ್ಯದಲ್ಲಿ ಭಾಜಪದ ಬೆಳವಣಿಗೆಗೆ ತಮ್ಮ ಪ್ರಭಾವಶಾಲಿ ನಾಯಕತ್ವವೇ ಕಾರಣವೆಂಬಂತೆ ವರ್ತಿಸುತ್ತಿದ್ದಾರೆಂದು ಅಧ್ಯಕ್ಷ ಎ.ಕೆ. ಸುಬ್ಬಯ್ಯನವರು ಆಕ್ಷೇಪಣೆಗೆ ಗುರಿಯಾದರು. ಅಧ್ಯಕ್ಷತೆಯನ್ನೂ ಕಳೆದುಕೊಂಡರು. ಬಿ.ಬಿ. ಶಿವಪ್ಪ ಅಧ್ಯಕ್ಷರಾದರು.
1984 ಬಂತು. ಇಂದಿರಾ ಗಾಂಧಿಯವರ ಹತ್ಯೆಯಿಂದಾಗಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ ಜಯ ಅದ್ಭುತ. ಭಾಜಪಕ್ಕೆ ದೊರಕಿದ ಸ್ಥಾನಗಳು ಎರಡು ಮಾತ್ರ. ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಜನತಾ ಪಕ್ಷವೂ ಸೋಲನ್ನನುಭವಿಸಿತು. ಮರುವರ್ಷ ಹೆಗಡೆ ನೇತೃತ್ವದ ಸರ್ಕಾರ ರಾಜೀನಾಮೆ ನೀಡಿತು. ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಹಾಗೂ ಭಾಜಪದ ನಡುವೆ ಸ್ಥಾನ ಹೊಂದಾಣಿಕೆಯ ಒಪ್ಪಂದವಾಗಲಿಲ್ಲ. ಜನತಾ ಪಕ್ಷ ಬಹುಮತ ಗಳಿಸಿ ಸರ್ಕಾರ ರಚಿಸಿತು. ಹಿಂದಿನ ಸಭೆಯಲ್ಲಿ 18 ಸದಸ್ಯರನ್ನು ಹೊಂದಿದ್ದ ಭಾಜಪ, ಈ ಬಾರಿ ಕೇವಲ 2 ಸ್ಥಾನಗಳನ್ನು ಪಡೆಯಿತು. ಹಿಂದಿನ ಚುನಾವಣೆಯಲ್ಲಿ ಭಾಜಪದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಎ.ಕೆ. ಸುಬ್ಬಯ್ಯನವರ ಪ್ರಭಾವದಿಂದಾಗಿ ಅದಕ್ಕೆ 18 ಸ್ಥಾನಗಳು ದೊರಕಿದ್ದುವೆಂದೂ, ಈ ಬಾರಿ ಅವರಿಲ್ಲದ್ದರಿಂದ ಸದಸ್ಯರ ಬಲ 2ಕ್ಕೆ ಇಳಿಯಿತೆಂದೂ ಕೆಲವರು ಪ್ರಚಾರ ಮಾಡಿದರು. ಅದೇನೇ ಇರಲಿ, ಕರ್ನಾಟಕದಲ್ಲಿ ಭಾಜಪದ ಪ್ರಭಾವ ಬಹಳಷ್ಟು ಇಳಿಯಿತೆನ್ನಬೇಕು.
ಎಚ್ಚೆಸ್ಕೆ
‘ಭಾರತೀಯ ಜನತಾ ಪಕ್ಷ’ ಲೇಖನದಲ್ಲಿ, ‘ಕರ್ನಾಟಕ ರಾಜಕೀಯ ಚಿಂತನೆ’ ಪುಸ್ತಕದಿಂದ