ಮೊದಲ ಗೆಲುವು; ನಾಯಕಪಟ್ಟ

ಮೊದಲ ಮಹಾಚುನಾವಣೆ. ಮೊದಲ ಗೆಲುವು. ಮೊದಲ ನಾಯಕ ಪಟ್ಟ. ಮೊದಲ ಬಾರಿಗೆ ರಾಜ್ಯದ ಆಡಳಿತ ನಡೆಸುವ ಅವಕಾಶ. ಅದು ಕೆಂಗಲ್ ಹನುಮಂತಯ್ಯ ಅವರ ಪಾಲಿಗೆ ಸುವರ್ಣ ಕಾಲ; ಪರ್ವಕಾಲವೂ ಹೌದು. ಕೆಂಗಲ್ ತಮ್ಮ ಆರಾಧ್ಯದೈವ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು: ‘ದೇವರೆ, ನನ್ನಿಂದ ಒಳ್ಳೆಯ ಕೆಲಸಗಳನ್ನು ಮಾಡಿಸು. ರಾಜ್ಯಕ್ಕೆ, ರಾಜ್ಯದ ಜನತೆಗೆ ನನ್ನ ಜೀವನವನ್ನು ಮೀಸಲಾಗಿಡಿಸು. ಸ್ವಾರ್ಥಕ್ಕೆ ಮನಸ್ಸು ಕೊಡುವಂತೆ ಮಾಡಬೇಡ’.
ಕೆಂಗಲ್ಲರ ಏಳೇಳು ಜನ್ಮದ ಕೀಳರಿಮೆ, ಆರ್ಥಿಕ ಹಿಂಜರಿಕೆ ಕೊಚ್ಚಿಹೋಗುವಂತೆ; ದೈವದತ್ತವಾದ ಪ್ರತಿಭೆ ಸದ್ವಿನಿಯೋಗವಾಗುವಂತೆ ಸ್ಥಾನಮಾನಗಳು ದೊರಕಿದವು. ಮೈಸೂರು ರಾಜ್ಯದಲ್ಲಿ ಕೆಂಗಲ್ಪರ್ವ ಪ್ರಾರಂಭವಾಯಿತು. ಮೈಸೂರು ಸಂಸ್ಥಾನದ ಮಾಜಿ ಮಹಾರಾಜರೂ ಅಂದಿನ ರಾಜಪ್ರಮುಖರೂ ಆದ ಜಯಚಾಮರಾಜ ಒಡೆಯರ್ ಎದುರು ಕೆಂಗಲ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು (18 ಮಾರ್ಚಿ 1952). ಅಂದು ಕೆಂಗಲ್ ದೈಹಿಕವಾಗಿಯೂ ಮಾನಸಿಕವಾಗಿಯೂ ಸಂತೋಷದಲ್ಲಿದ್ದರು. ಆಕರ್ಷಕ ವ್ಯಕ್ತಿತ್ವ, ಅಸಾಧಾರಣ ಆತ್ಮಾಭಿಮಾನ ಎದ್ದುಕಾಣುತ್ತಿತ್ತು. ಕನಸುಗಾರಿಕೆ ಮುಕ್ಕಳಿಸುತ್ತಿತ್ತು. ಹೊಸತನ್ನು ಸಾಧಿಸುವ ಹುಮ್ಮಸ್ಸು ಉಕ್ಕುತ್ತಿತ್ತು. ಗೋಧಿ ಬಣ್ಣದ ಮುಖ ಕಾಂತಿಯಿಂದ ಕೂಡಿತ್ತು. ವೇಷಭೂಷಣ ಭಿನ್ನವಾಗಿತ್ತು. ಗರಿಗರಿಯಾಗಿ ಇಸ್ತ್ರಿ ಮಾಡಿದ ಶ್ವೇತವರ್ಣದ ಪ್ಯಾಂಟು, ತುಂಬುಕಾಲಿನ ಉದ್ದನೆಯ ಕಪ್ಪುಕೋಟು, ತಲೆಗೆ ಥಳಥಳ ಹೊಳೆಯುವ ಕಲಾಬತ್ತಿನ ಮೈಸೂರುಪೇಟ, ಬಲತೋಳಿನ ಕಂಕುಳು ಬಳಸಿ, ಎಡ ಹೆಗಲಿನ ಮೇಲೆ ಇಳಿದಿದ್ದ ಜರಿಯ ಶಲ್ಯ, ಕಣ್ಣಿಗೆ ಕಪ್ಪುಕನ್ನಡಕ, ಕಾಲಿಗೆ ಕಪ್ಪು ಷೂ, ಗತ್ತು ಗಾಂಭೀರ್ಯಕ್ಕೆ ಕೊರತೆಯಿಲ್ಲ. ರಾಜ್ಯದ ಮುಖ್ಯಮಂತ್ರಿಯ ಸ್ಥಾನಕ್ಕೆ ಹೇಳಿ ಮಾಡಿಸಿದ ನಿಲುವು.
ಮುಖ್ಯಮಂತ್ರಿ ಕೆಂಗಲ್ ದೆಹಲಿಗೆ ಹೋಗಿ ಪ್ರಧಾನ ಮಂತ್ರಿ ಜವಾಹರಲಾಲ ನೆಹರೂ ಅವರನ್ನು ಭೇಟಿಯಾಗಿ, ಹೊಸ ಮಂತ್ರಿಮಂಡಲ ರಚನೆಗೆ ಸಲಹೆ ಸೂಚನೆ ಕೇಳಿದರು. ನೆಹರೂ ಸ್ಪಷ್ಟವಾಗಿ ನುಡಿದರು: ‘ನೋಡಿ ಹನುಮಂತಯ್ಯ ನೀವು ಸಮರ್ಥರಿದ್ದೀರಿ. ನಿಮಗೆ ಬೇಕಾದಂತೆ ಮಂತ್ರಿಮಂಡಲವನ್ನು ನೀವೇ ರಚಿಸಿಕೊಳ್ಳಿ. ಇದಕ್ಕೆ ನನ್ನ ಸಲಹೆ ಅಗತ್ಯವಿಲ್ಲ’. ಆಗಿನ್ನೂ ಹೈಕಮಾಂಡಿಂಗ್ ಸಂಸ್ಕೃತಿ ಹುಟ್ಟಿರಲಿಲ್ಲ. ಕೇಂದ್ರ ನಾಯಕರು ರಾಜ್ಯ ನಾಯಕರನ್ನು ಗೌರವಿಸುವ ಕಾಲ ಅದಾಗಿತ್ತು. ಕೆಂಗಲ್ಲರ ಸಾಮರ್ಥ್ಯದ ಬಗೆಗೆ ನೆಹರೂ ಅವರಿಗೆ ಮನವರಿಕೆಯಾಗಿತ್ತು, ಮಿಗಿಲಾಗಿ ನಂಬಿಕೆಯಿತ್ತು.
ಕೆ.ಹನುಮಂತಯ್ಯ ಚಿಕ್ಕದಾದ ಚೊಕ್ಕದಾದ ಆರು ಜನರ ಸಚಿವ ಸಂಪುಟವನ್ನು ರಚಿಸಿದರು. ಅಷ್ಟೊಂದು ಚಿಕ್ಕ ಮಂತ್ರಿಮಂಡಲ ದೇಶದ ಇನ್ಯಾವ ರಾಜ್ಯದಲ್ಲೂ ಇರಲಿಲ್ಲ. ವಿವರ ಹೀಗಿದೆ: ಕೆ.ಹನುಮಂತಯ್ಯ (ಮುಖ್ಯಮಂತ್ರಿ), ಟಿ.ಸಿದ್ಧಲಿಂಗಯ್ಯ (ಕೈಗಾರಿಕೆ ಮಂತ್ರಿ), ಎ.ಜಿ.ರಾಮಚಂದ್ರರಾವ್ (ಕಾನೂನು ಮತ್ತು ಶಿಕ್ಷಣ ಮಂತ್ರಿ), ಟಿ.ಚನ್ನಯ್ಯ (ಆರೋಗ್ಯ ಮತ್ತು ನಗರಾಭಿವೃದ್ಧಿ ಮಂತ್ರಿ), ಕಡಿದಾಳ್ ಮಂಜಪ್ಪ (ಕಂದಾಯ ಮತ್ತು ಕಾಮಗಾರಿ ಮಂತ್ರಿ) ಮತ್ತು ಎಚ್.ಸಿದ್ಧವೀರಪ್ಪ (ಗೃಹ ಮತ್ತು ವ್ಯವಸಾಯ ಮಂತ್ರಿ). ಆ ಕಾಲಕ್ಕೆ ಅದು ಸಮತೋಲನ ಮಂತ್ರಿಮಂಡಲವಾಗಿತ್ತು. ಆಯ್ಕೆಯಲ್ಲಿ ವ್ಯಕ್ತಿತ್ವಕ್ಕೆ ಗಮನ ಕೊಡಲಾಗಿತ್ತು. ಯಾವುದೇ ಒತ್ತಡಕ್ಕೆ ಮಣಿದಿರಲಿಲ್ಲ.
ಬಾಡಿಗೆ ಮನೆಯಲ್ಲಿದ್ದ ಕೆಂಗಲ್ಲರ ವಾಸ ಕುಮಾರ ಕೃಪಾಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರು, ಅವರ ತಾಯಿ, ಒಬ್ಬ ಸೋದರ, ಒಂದಿಬ್ಬರು ಸಹಾಯಕರು ಅವರ ಬಳಗ. ಜೊತೆಗೆ ಸರ್ಕಾರದ ಸಿಬ್ಬಂದಿ. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದರೆ ಏನೇನು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದು ಕೆಂಗಲ್ ಯೋಜಿಸಿದ್ದರೋ ಯೋಚಿಸಿದ್ದರೋ ಆ ಎಲ್ಲವನ್ನೂ ಕಾರ್ಯಗತಗೊಳಿಸಲು ಅವರು ಮುಂದಾದರು. ಮುಖ್ಯಮಂತ್ರಿ ಅವಧಿಯಲ್ಲಿ ಕೆಂಗಲ್ ಕೈಗೊಂಡ ಎಲ್ಲಾ ಕಾರ್ಯ ಯೋಜನೆಗಳಿಗೆ ಕುಮಾರ ಕೃಪಾ ಕೇಂದ್ರವಾಯಿತು.
–ಪ್ರೊ. ಡಿ.ಲಿಂಗಯ್ಯ
ರಾಷ್ಟ್ರರತ್ನ ಕೆಂಗಲ್ ಹನುಮಂತಯ್ಯ ಸಮಗ್ರ ಜೀವನ ಚರಿತ್ರೆ ಪುಸ್ತಕದಿಂದ