‘ಹಿಂಸೆಯೇ ಬಿಜೆಪಿ ಅಸ್ತ್ರ’

ಮಂಗಳೂರು: ‘ಹಿಂಸೆಯೇ ಬಿಜೆಪಿಯವರ ಅಸ್ತ್ರ. ಗಲಭೆ ಮತ್ತು ಹಿಂಸಾಚಾರದ ಮೂಲಕವೇ ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿಯವರು ಸನ್ನದ್ಧರಾಗುತ್ತಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ಜನಾಶೀರ್ವಾದ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಬಳಿ ಅಭಿವೃದ್ಧಿಯ ಕಾರ್ಯಸೂಚಿ ಇಲ್ಲ. ಅವರು ರಾಜಕೀಯ ಲಾಭಕ್ಕೆ ಹಿಂಸೆಯನ್ನೇ ನೆಚ್ಚಿಕೊಂಡಿದ್ದಾರೆ. ಹಿಂಸೆಯ ದಾರಿ ಅವರಿಗೇ ಇರಲಿ. ನಾವು ಪ್ರೀತಿ, ಭ್ರಾತೃತ್ವ, ಸಹಬಾಳ್ವೆಯಿಂದ ಗೆಲುವು ಸಾಧಿಸೋಣ’ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
‘ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಪ್ರಧಾನಿ ಈಗ ಸರಣಿ ಸುಳ್ಳುಗಳನ್ನು ಹೊಸೆಯುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಉದ್ಯೋಗ ಸೃಷ್ಟಿ, ಭ್ರಷ್ಟಾಚಾರ ನಿಯಂತ್ರಣ, ಕಪ್ಪುಹಣ ವಾಪಸ್ ತರುವ ವಿಚಾರಗಳಲ್ಲಿ ದೇಶದ ಜನರಿಗೆ ಮೋಸ ಮಾಡಿದ್ದಾರೆ. ‘ನಾನು ಚೌಕಿದಾರ ಆಗುತ್ತೇನೆ’ ಎಂದವರ ಕಣ್ಣೆದುರಿನಲ್ಲೇ ಸಾವಿರಾರು ಕೋಟಿ ರೂಪಾಯಿ ಲೂಟಿ ಆಗುತ್ತಿದೆ. ಪ್ರಧಾನಿ ಮಾತ್ರ ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತಿದ್ದಾರೆ ಎಂದು ಟೀಕಿಸಿದರು.
ಅಭಿಪ್ರಾಯ ಆಧರಿಸಿ ಟಿಕೆಟ್
‘ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಆಲಿಸಿ ಟಿಕೆಟ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಸಿ.ವೇಣುಗೋಪಾಲ್ ಅವರಿಗೆ ಸೂಚನೆ ನೀಡಿದ್ದೇನೆ’ ಎಂದು ರಾಹುಲ್ ಪ್ರಕಟಿಸಿದರು.
‘ನಿಕ್ಲೆಗ್ ಎನ್ನ ನಮಸ್ಕಾರ’ ಎಂದು ತುಳುವಿನಲ್ಲಿ ಅವರು ಮಾತು ಆರಂಭಿಸಿದಾಗ, ಮೈದಾನದಲ್ಲಿ ನೆರೆದಿದ್ದವರು ಹರ್ಷೋದ್ಗಾರ ಮಾಡಿದರು.
****
ಜ್ಯೋತಿ ವೃತ್ತದಿಂದ ರೋಡ್ ಷೋ
ಭಾಷಣದುದ್ದಕ್ಕೂ ಪ್ರಧಾನಿ ವಿರುದ್ಧ ವಾಗ್ದಾಳಿ
ದ.ಕ.ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಗೆಲ್ಲಿಸುವಂತೆ ಮನವಿ