‘ಪಾರ್ಟಿ ಫಂಡ್ ನೀಡದೆ ಸಚಿವರಿಂದ ವಂಚನೆ’
ಚನ್ನರಾಯಪಟ್ಟಣ: ‘ಸಮ್ಮಿಶ್ರ ಸರ್ಕಾರ ಬಂದರೆ ಮುಖ್ಯಮಂತ್ರಿ ಆಗಬಹುದು ಎಂಬ ಆಸೆಯಿಂದ ಹಾಸನ, ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪಕ್ಷದ ನಿಧಿಯಿಂದ ಹಣ ನೀಡದೆ ಸಚಿವ ಎಚ್.ಸಿ. ಮಹದೇವಪ್ಪ ವಂಚಿಸಿದ್ದಾರೆ’ ಎಂದು ಶ್ರವಣಬೆಳಗೊಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ಪುಟ್ಟೇಗೌಡ ಆರೋಪಿಸಿದ್ದಾರೆ.
ಬಾಗೂರು ಹೋಬಳಿಯ ವ್ಯಕ್ತಿಯೊಂದಿಗೆ ಪುಟ್ಟೇಗೌಡ ಅವರು ಮಾತನಾಡಿರುವ 3.34 ನಿಮಿಷದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.
‘ದೇವೇಗೌಡ ಜತೆ ಹೊಂದಾಣಿಕೆ ಮಾಡಿಕೊಂಡು, ಹಾಸನಕ್ಕೆ ಬರಬೇಕಿದ್ದ ಫಂಡ್ ನುಂಗಿ ಹಾಕಿ ನನಗೆ ಮೋಸ ಮಾಡಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ₹ 3.50 ಕೋಟಿ ಕೊಡಲು ಹೇಳಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರ ಬಂದರೆ ಮುಖ್ಯಮಂತ್ರಿ ಮಾಡುವುದಾಗಿ ದೇವೇಗೌಡರು ಆಸೆ ಹುಟ್ಟಿಸಿದ್ದರಿಂದ ಅವರ ಮಾತು ನಂಬಿ, ನಮಗೆ ಕೈಕೊಟ್ಟಿದ್ದಾನೆ. ಐ.ಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ನಾಮ ಹಾಕಿದ್ದಾನೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಈ ವಿಷಯವನ್ನು ಬಹಿರಂಗ ಪಡಿಸಿದರೆ ದಲಿತರು ಮತ ಹಾಕುವುದಿಲ್ಲ ಅಂದುಕೊಂಡು ಹೆದರಿ ಹೇಳಲಿಲ್ಲ’ ಎಂದು ಕಾರ್ಯಕರ್ತನಿಗೆ ಮನವರಿಕೆ ಮಾಡಿದ್ದಾರೆ. ಸಂಭಾಷಣೆಯಲ್ಲಿ ಸಚಿವರನ್ನು ಏಕವಚನ ಹಾಗೂ ಅವಾಚ್ಯ ಶಬ್ದಗಳಿಂದ ಪುಟ್ಟೇಗೌಡ ನಿಂದಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರಯತ್ನಿಸಿದರೂ ಪುಟ್ಟೇಗೌಡ ಅವರ ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ.